Tuesday, August 22, 2017

ಅದೆಷ್ಟೋ ಹೊತ್ತು, ಕತ್ತಲಲ್ಲಿ ಹೀಗೆಯೇ  ಕೂತಿದ್ದೆ. ಭಯವೊಂದು ಆವರಿಸಿ ಮೈ ತುಂಬಾ ಅಲ್ಲಾಡಲು ಆಗದ ನಿಶ್ಯಕ್ತಿ , ಮುದ್ದಾಡಿ ತಬ್ಬ ಬೇಕಿದ್ದ ದೇಹವೊಂದು ತಣ್ಣಗಾಗಿ ಕೊರಡಾಗಿ ಪಕ್ಕದಲ್ಲಿದೆ ಯಾರಿಗೆ ಹೇಳುವುದು, ತಾಳಿಗೆ ತಲೆ ಕೊಟ್ಟು ಏನನ್ನು ಹಂಚಿಕೊಳ್ಳದ ಅವಳಿಗೆ ಈ ವಿಷಯ ಗೊತ್ತಾದರೆ  ಬದುಕು ಬೀದಿಗೆ ಬೀಳುವುದು , ಹೊಟ್ಟೆ ಪಾಡಿಗೆಂದು ಹಿಡಿದಿದ್ದ ಕೆಲಸ ಕೈತಪ್ಪುವುದು ಹೇಗೆ ಪಾರಾಗಲಿ? ಗೊತ್ತಿಲ್ಲದೇ ಕಣ್ಣಿಂದ ನೀರು ಸುರಿಯಲಾರಂಭಿಸಿತು ಕತ್ತಲಲ್ಲೇ ತಡಕಾಡಿ ನೀರಿನ ಬಾಟಲ್ ಹುಡುಕಿದೆ , ಕೈಗೆ ತಾಗಿ ಬಾಟಲ್ ಬಿತ್ತು , ಅತ್ತ ಅಡಿಗೆ ಮನೆಯಲ್ಲಿ ಬೆಕ್ಕೊಂದು "ಮ್ಯಾವ್" ಅಂತ ಕಿರುಚಿಕೊಂಡು ಕತ್ತಲಲ್ಲೇ ಕೆಳಗೆ ಹಾರಿತು, ಸಮಯ ಎಷ್ಟಾಗಿರಬಹುದು?  ಬಂದದ್ದು ಆರೂವರೆಗೆ , ಮಳೆ ಏಳಕ್ಕೆಲ್ಲ  ಶುರುವಾಗಿತ್ತು , ಟೀ  ತಂದಿಟ್ಟು  ಒಳ ಹೋದವಳು ಕೋಣೆಯಿಂದ ಬಟ್ಟೆ ಬದಲಿಸಿ ಬಂದಳು, ಕೈ ಹಿಡಿದು ಮಾತಾಡುತ್ತಾ ಹೀಗೆ ಇಲ್ಲಿಯೇ ಕುಳಿತವಳು ಜಾರಿದಳು, ನಾನು ಅದು ಉನ್ಮತ್ತ ಸ್ಥಿತಿ ಅಂತ ಮೈಮರೆತೆ, ಆದರೆ ಮೈ ವಾಲಿ ಕೆಳಗೆ ಬಿದ್ದಾಗಲೇ ಅರಿವಾದ್ದು ಆದದ್ದು ಪ್ರಮಾದ , ದಿಗ್ಭ್ರಮೆ ಹಿಡಿದಿತ್ತು, ಕಿರುಚ ಬೇಕೆನ್ನುವ ಆತುರಕ್ಕೆ ಭಯ ತಡೆ ಹಿಡಿದಿತ್ತು ,ಮನೆಯಿಂದ ಒಂದೇ ಸಮನೆ ಫೋನ್ , ತೆಗೆದು ಸ್ವಿಚ್ ಆಫ್ ಮಾಡಿ ತಲೆ ಮೇಲೆ ಕೈ ಹೊತ್ತು ಕೂತವನಿಗೆ ಎಚ್ಚರಾದ್ದು ಈಗಲೇ , ಮಿದುಳಿನಲ್ಲಿ ನಾನು ನೋಡಿದ ಎಲ್ಲ ಚಿತ್ರಗಳು ಬಂದು ಹೋದವು, ದ್ರಿಶ್ಯಮ್ ನ ಜಾರ್ಜ್ ಕುಟ್ಟಿ , ಮನೆಯಲ್ಲೇ ಹೆಣ ಇಟ್ಟುಕೊಂಡು ಹೆದರುವ ತರ್ಕ, ಸರೋವರದಲ್ಲಿ ಪ್ರಿಯತಮನ ಜತೆ ಸರಸವಾಡಲು ಬಂದವಳ ಹೆಣ ಮುಳುಗಿಸುವ  ದ ಇಸ್ಲೆ ಯ ದೃಶ್ಯ ಎಲ್ಲವೂ, ಸಧ್ಯಕ್ಕೆ ನನಗೆ ಇರುವ ಭಯ ಯಾರದ್ದು ಪಟ್ಟಿ ಮಾಡತೊಡಗಿದೆ
೧) ಇವಳ ಗಂಡ(ಸಧ್ಯ ಬರಲಾರ , ಆರು ದಿನದ ಚೀನಾ ಪ್ರವಾಸ)
೨)ನನ್ನ ಹೆಂಡತಿ ( ಇದು ದೊಡ್ಡ ಸಮಸ್ಯೆ)
೩)ಕೆಲಸ-( ಕೊಲೆ ಕೇಸಿನಲ್ಲಿ ಸಿಕ್ಕಿ ಬಿದ್ದರೆ ಖಂಡಿತಾ ಉಳಿಯುವುದಿಲ್ಲ)

ತಕ್ಷಣಕ್ಕೆ ಈ ವಿಷಯ ಯಾರಲ್ಲಿ ಹೇಳಲಿ? ಯಾರು ನಂಬಿಗಸ್ಥರು ಅನ್ನುವುದು ನನಗೆ ತೋಚುತ್ತಿರಲಿಲ್ಲ, ನನ್ನ ಆತ್ಮ ಬಲವೆಲ್ಲ ಪಣಕ್ಕಿಟ್ಟು ಧೈರ್ಯ ತಂದುಕೊಂಡೆ, ಈಗ ಹೆದರಿದರೆ ಕೆಲಸವಾಗದು,ಅಲ್ಲಿಯೇ ತಡಕಾಡಿದೆ, ಎದ್ದು ಗೋಡೆಯ ಮೇಲೆ ಕೈಯಾಡಿಸುತ್ತಾ ನಾಲ್ಕು ಹೆಜ್ಜೆ ನಡೆದೇ. ದೀಪದ ಸ್ವಿಚ್ಚು ಕೈಗೆ ತಗಲಿತು , ಒಂದೊಂದಾಗಿ ಹಾಕುತ್ತ ಬಂದೆ ಮೂರನೆಯದ್ದು ಹಾಲಿನದ್ದು ಹೊತ್ತಿಕೊಂಡಿತು, ಬೆಳಕು ಕಣ್ಣು ಕುಕ್ಕುತ್ತಿತ್ತು, ಅವಳ ದೇಹ ಎತ್ತಲಾಗದ ಭಾರವಿತ್ತು, ಪ್ರಯತ್ನಿಸಲಿಲ್ಲ, ಕೈ ಉಗುರುಗಳನ್ನ ನೋಡಿದೆ, ಒಹ್ ಒಂದೇ ಗಂಟೆಯಾದ್ದರಿಂದ ಜೀವಂತ ಇದ್ದಂತೆಯೇ ಅನಿಸುತ್ತಿದ್ದವು,ಪಕ್ಕದಲ್ಲೇ ಕೂತು ಯೋಚಿಸತೊಡಗಿದೆ
ಸ್ಯಾಮುಯೆಲ್ - ಹೇಳಬಹುದು, ಒಳ್ಳೆಯವ , ಆದರೆ ನಂಬಿಕೆ ಇಲ್ಲ
ದೀಪಾ- ಸೀದಾ ಮನೆಗೆ ವಿಷಯ ತಲುಪುವುದು
ಮನೋಹರ- ಇಂತಹ ವಿಷಯದಲ್ಲೆಲ್ಲ ಹೈ ಇಂಪ್ಲ್ಯೂಯೆನ್ಸ್  ಮಾಡಿಸಬಹುದು, ಆದರೆ ಅವನಿಗೆ ನನ್ನವಳ ಮೇಲೆ ಅತಿಯಾದ ಆದರವಿದೆ , ಇದು ಅಪಾಯ, ಕೈ ಬಿಟ್ಟರು ಬಿಟ್ಟನೇ
ಹೆಂಡತಿ- ಹೋದ ಸಾರಿ ದೀಪಾಳ ಮನೆಯಲ್ಲಿ ಅವಳ ಗಂಡ ಮೋಸ ಮಾಡಿದ್ದನ್ನು ಕಂಡು ದಿಪಾಳಿಗೂ ಹೇಳದೆ ಅವನನ್ನು ಕರೆದು ಬೆದರಿಕೆ ಹಾಕಿ ಸರಿ ದಾರಿಗೆ ತಂದದ್ದನ್ನು ಕಂಡಿದ್ದೇನೆ ತಾನು, ಈಗ ತಾನು ಅದೇ ದಾರಿಯಲ್ಲಿದ್ದೆಯೆಂದರೆ ಏನು ಮಾಡುವಳು? ತಿಳಿಯದು, ಸಣ್ಣದಾಗಿ ತಲೆ ಸಿಡಿಯಲಾರಂಭಿಸಿತು, ಕಣ್ಣು ಕತ್ತಲೆಗಟ್ಟಿತು ಅಷ್ಟೇ!

ಎಚ್ಚರಾದಾಗ ಅವಳು ಎದುರು ಕೂತಿದ್ದಳು , ಕೈ ಚಾಚಿದೆ, ಮೃದುವಾಗಿ ಬೆರಳೊಡನೆ ಆಟವಾಡುತ್ತಾ ಸವರಿದಳು, ಮೈ ಝುಮ್ಮೆನ್ನುವ ಅನುಭವ, ಹಿತವಾಗಿ ಮುಗುಳ್ನಕ್ಕಳು, ನಾನು ನಂಬದವನಂತೆ ಪದೇ ಪದೇ ಕಣ್ಣುಜ್ಜಿದೆ, ಸೋಫಾದ ಕೆಳಗೆ ನೋಡಿದೆ, ಅಲ್ಲಿ ದೇಹ ಬಿದ್ದಿದ್ದ ಯಾವ ಗುರುತು ಇರಲಿಲ್ಲ,"ನಾನು ಭೂತವಾಗಿದ್ದೀನಾ ಅಂತ ಪರೀಕ್ಷಿಸುತ್ತಿದ್ದೀಯಾ?" ಅವಳ ತಣ್ಣನೆಯ ಹರಿತ ದನಿ ತೇಲಿಬಂತು, ಬಲವಂತದ ನಗು ನಕ್ಕೆ, "ಹೇಳು, ನನ್ನ ಯಾಕೆ ಬಿಟ್ಟು ಹೋದೆ?" "ಅ ... ಅ ... ಅದೂ , ಪ್ಲೀಸ್ ಈಗ್ಯಾಕೆ ಹಿಂದಿನ ಮಾತು , ಬಿಟ್ಟು ಬಿಡು, ಈಗ ನನ್ನ ಬರಹೇಳಿದ್ಯಾಕೆ ಮೊದಲು ಹೇಳು , ಪ್ಲೀಸ್" ನಾನು ಅಂಗಲಾಚಿದೆ, "ಇಲ್ಲ, ಕಾರಣ ಹೇಳಲೇಬೇಕು, ನೀನು ಕಾರಣ ಹೇಳಿದರೆ ನಾನು ನಿನಗೆ ಅತಿ ಮುಖ್ಯ ವಿಷಯ ಹೇಳೋದು" ಅವಳು  ತುಂಟತನದಲ್ಲಿ(ಬಹುಶಃ ಅದು ನನ್ನ ಕಲ್ಪನೆಯೇ? ನನಗರ್ಥವಾಗಲಿಲ್ಲ)ಅವಳ ಕೆಳ ತುಟಿ ಕಚ್ಚಿದಳು, ನಾನು ಸಲ್ಪ  ಹಗುರಾದೆ.
"ನಿಜ ಹೇಳಲಾ,ಸುಳ್ಳ?" ಓ , ಇದು ನಾವಿಬ್ಬರು ಯಾವಾಗಲೂ ಆಡುತ್ತಿದ್ದ ಆಟ , ತುಂಬಾ ಸಾರಿ ಅವಳು ಪರವಾಗಿಲ್ಲ ಸುಳ್ಳೇ ಹೇಳು ಅಂತಿದ್ದಳು , ನನಗೆ ಹೂ ಮಲೆಯಲ್ಲಿ  ಕಳೆದ ರಾತ್ರಿ ನೆನಪಾಗಿ ಮೈ ಬಿಸಿಯಾಯ್ತು,
ಅವತ್ತು ಪೂರ್ಣ ಬೆಳದಿಂಗಳ ದಿನ , ಇವತ್ತು ರಾತ್ರಿ ಬರ್ತಿಯಾ? ಅಂತ ಅವಳನ್ನ ಕೇಳಿದ್ದೆ ಎಲ್ಲಿಗೆ ಅಂತ ತಡವರಿಸಿದ್ದಳು ಹೂ ಮಲೆಯ ತುದಿಗೆ ಹೋಗೋಣ, ಇವತ್ತು ಹುಣ್ಣಿಮೆ  ಅಂದಾಗ ಭಯವಾಗುತ್ತೆ ಅಂದಿದ್ದಳು, ನಾನು ಒತ್ತಾಯಿಸಿದಾಗ ಒಪ್ಪಿ ನಾನು ಹೇಳಿದ ಜಾಗಕ್ಕೆ ಬಂದಿದ್ದಳು, ನಂತರ ಒಂದು ಗಂಟೆ ಉಸಿರು ಬಿಗಿ ಹಿಡಿದು ಹತ್ತಿದ್ದೆವು, ಹಾಲು ಮಂಟಪ, ಅದರ ತುದಿಯ ಮೇಲೆ ಸೂರ್ಯನ ಬೆಳಕು ಅಥವಾ ಚಂದ್ರನ ಬೆಳಕು ಯಾವುದು ಬಿದ್ದರು ಇಡೀ ಮಂಟಪದಲ್ಲಿ ಬೆಳಕು ಕೋರೈಸುತ್ತಿತ್ತು, ಹಾಗೆಂದೇ ಅದಕ್ಕೆ ಹಾಲು ಮಂಟಪ ಅನ್ನುತ್ತಿದ್ದರು ಯಾವ ದೊರೆಯೊ ಯಾವ ಪ್ರೇಯಸಿಗೋ ಕಟ್ಟಿದ ಕಥೆ ಊರ ತುಂಬೆಲ್ಲ ಹಾಡಾಗಿ ಕಥೆಯಾಗಿ ಹರಿದಾಡಿಕೊಂಡಿತ್ತು , ನನ್ನ ಅತಿ ರಹಸ್ಯಗಳನ್ನೆಲ್ಲ ಬಚ್ಚಿಟ್ಟುಕೊಂಡ ಈ ಮಂಟಪ ನನಗೆ ಬಹಳವೇ ಪ್ರಿಯವಾದ್ದು, ಅವತ್ತು ಕುಳಿತು ಬೆದರಿಕೆಯ ಕಣ್ಣಲ್ಲಿ ಬೆಳಗು ಹರಿವುದರೊಳಗೆ ನನಗೆ ನಮ್ಮನೆಯ ಹಿತ್ತಲಿಗೆ ಬಿಟ್ಟು ಬಿಡು ಅಂದಾಗ ನನಗೆ ಆ ಭಯ ತಮಾಷೆಯಂತೆ ಕಾಣಿಸಿತ್ತು ಮತ್ತೆ ಅವಳನ್ನು ಕೆಣಕಿದ್ದೆ ಸತಾಯಿಸಿದ್ದೆ ಅವಳು ಸತ್ಯ ಹೇಳು, ನಿನಗೆ ನಾನೇಕಿಷ್ಟ ಅಂದಾಗ ಸುಳ್ಳು ಹೇಳಲಾ ಸತ್ಯ ಹೇಳಲಾ ಅಂತ ಕೇಳಿದ್ದೆ, ಅವಳು ಮುಗ್ಧೆಯಾಗಿ  ಸತ್ಯ ಹೇಳು ಅಥವಾ ನಿನಗಿಷ್ಟ ಆಗಿದ್ರೆ ಸುಳ್ಳು ಹೇಳು ಅಂದಾಗ ನನಗೆ ಈ ಕ್ಷಣಕ್ಕೆ ನೀನಿಷ್ಟ ಅಂದು ಸುಮ್ಮನಾಗಿದ್ದೆ, ಅವಳೂ  ಹಠಕ್ಕೆ ಬಿದ್ದವಳಂತೆ ನನಗೆ ನೀನಿಷ್ಟವೇ ಇಲ್ಲ ಅಂದಿದ್ದಳು ಬಹುಶಃ ಅವಳ ಕಾಣುಗಳಲ್ಲಿದ್ದ ನೀರು ಪಸೆ ನನ್ನ ಕೈಗಂಟಿತ್ತು, ಅದನ್ನೊರೆಸುತ್ತ್ತ ಹೋದ ಬೆರಳಿಗೆ ಅವಳ ಮೂಗಿನ ನತ್ತು ಹಣೆಯ ಬೆವರು ಅದುರುತ್ತಿದ್ದ ತುಟಿಗಳೂ  ಏರಿಳಿಯುತ್ತಿದ್ದ ಎದೆಯ ಲಯತಪ್ಪಿದ  ಹಾಡೂ  ಕೇಳಿಸಿತ್ತು, ನಾನು ಉನ್ಮತ್ತನಾಗಿದ್ದೆ ಅವಳ ದೇಹದ ತುಂಬೆಲ್ಲ ಅಂತಿದ್ದ ಅದಾವುದೋ ಮಾಯಕದ ಸುವಾಸನೆ ನನ್ನ ಕಟ್ಟಿ ಹಾಕಿತ್ತು,  ಅವಳು ಅವತ್ತು ಬೆಳದಿಂಗಳಿನಲ್ಲಿ ಕನವರಿಸಿದ್ದಳು"ನಿನ್ನ ಬಿಟ್ಟು ಬದುಕಲಾರೆ, ಈ ಸುಖದಾಣೆ ಸತ್ಯ"

"ಮತ್ತೆ ನನ್ನ ಹಾಲು ಮಂಟಪಕ್ಕೆ ಕರಿಬೇಡ"ಅವಳ ದನಿ ಎಚ್ಚರಿಸಿತು, ತಬ್ಬಿಬ್ಬಾಗಿ ನೋಡಿದೆ, ಇವಳು ನಿಜವಾಗಲೂ ನನ್ನ ಎದುರಿಗಿದ್ದಾಳೆ ಅನ್ನುವುದು ರೋಮಾಂಚನವನ್ನು ಭಯವನ್ನು ಒಟ್ಟಿಗೆ ತರುತ್ತಿತ್ತು, ನನ್ನ ಮನಸ್ಸನ್ನು ಓದುತ್ತಿದ್ದಾಳೆ ಅನ್ನುವುದು ಭಯವನ್ನು ಇನ್ನು ಹೆಚ್ಚಿಸಿತ್ತು, "ನೀನ್ಯಾವತ್ತು ಅಷ್ಟು ಕ್ರೂರಿಯಾಗಿ ನನ್ನ ಕಣ್ಣಿಗೆ ಕಾಣಲೇ ಇಲ್ಲ, ಅದೆಷ್ಟೋ ಸಾರಿ ನಿನ್ನ ಕ್ಷಮಿಸಿದ್ದೀನಿ ಅನ್ನೋ ಭ್ರಮೆಯಲ್ಲಿ ಬದುಕೋಕೆ ಪ್ರಯತ್ನಿಸಿದೆ, ನೀನು ಸಿಕ್ಕಿದ ಜಾಗಗಳನ್ನೆಲ್ಲ ಒಂದೊಂದಾಗಿ ನಿರಾಕರಿಸುತ್ತಾ ನಿರಾಕರಿಸುತ್ತ.... ಈಗ ಇಡೀ ಜಗತ್ತೇ  ಬೇಡ ಅನಿಸಿಬಿಟ್ಟಿದೆ," ಅವಳು ಮಾತಾಡುತ್ತಾ ಹೋದಳು"ಅಷ್ಟಕ್ಕೂ ಯಾರನ್ನಾದರೂ ಈ ತರಹ ನಮ್ಮೊಳಗೇ ಬಿಟ್ಟು ಕೊಳ್ಳುವ ಅವಶ್ಯಕತೆ ಏನಿರುತ್ತೆ? ನನಗೆ ಉತ್ತರ ಸಿಕ್ಕಿಲ್ಲ, ನೀನವತ್ತು  ಹಿಡಿದ ಕೈ ಕೊಡವಿ ಬಸ್ಸು ಹತ್ತಿದೆ ಅಲ್ಲ ಅವತ್ತು ನನ್ನ ಮನಸಿಗೆ ಖಾತ್ರಿ ಆಗಿತ್ತು ತಿರುಗಿ ಬರಲಾರೆ ಅಂತ, ಆದರೂ ನೋಡು ಆಗದ್ದನ್ನ ಆಗೇ ಬಿಡುತ್ತೆ ಅಂತ ಬಯಸುತ್ತಾ ಅದಕ್ಕಾಗಿ ಭ್ರಮಿಸುತ್ತಾ ಹುಡುಕಾಡುತ್ತಾ ಮನಸ್ಸು ತನ್ನ ತಪ್ಪಿದ ಲಯ ಕಂಡುಕೊಳ್ಳೋಕೆ ಪ್ರಯತ್ನಿಸುತ್ತೆ, ನೀನು ಹೋದ ಮೇಲೆಯೇ ನಾನು ನಿನ್ನ ಬಗ್ಗೆ ಬಹಳಷ್ಟು ತಿಳಿದುಕೊಂಡೆ, ನೀನು ನನ್ನಿoದ ಮುಚ್ಚಿಟ್ಟ ಎಲ್ಲ ವಿಷಯಗಳು ನನಗೆ ಗೊತ್ತಾಗುತ್ತಾ ಹೋದವು, ನೀನೊಂದು ಭ್ರಮೆಯಲ್ಲಿ ನನ್ನ ಬದುಕಲು ಬಿಟ್ಟಿದ್ದೆ, ನಾನು ಅದನ್ನೇ ಬಹಳ ಕಾಲ ಜೀವಿಸಿದ್ದೆ ಅನ್ನುವ ಸತ್ಯ ನನಗೆ ಅರಿವಾಗುತ್ತಾ ಹೋಯಿತು, ಆದರೆ ಈಗ ಬಂದದ್ದು ಮಾತ್ರ ನಿನ್ನ ಬಾಯಿಂದ ಕಾರಣ ಕೇಳಲು, ಹೇಳು , ಅದು ಯಾವ ಕಾರಣ ನಿನ್ನ ಇಲ್ಲಿಗೆ ನನ್ನಿಂದ ದೂರ ಎಳೆದು ತಂದದ್ದು" ಅವಳ ದ್ವನಿ  ತೀವ್ರ ವಾಗುತ್ತಾ ಸಾಗಿತ್ತು , ನಾನು ಮಾತಾಡಲೇ ಬೇಕಿತ್ತು "ನಿನ್ನ ಬಿಟ್ಟು ಬರಲು ಅಂಥಾ ಕಾರಣ ಏನಿರಲಿಲ್ಲ, ಆದರೂ ನಾನು ಬಹುಶಃ ಬಂಧನಗಳಿಗೆ ಹೆದರಿದ್ದೆ, ಅಥವಾ ಪಲಾಯನ ನನ್ನ ರಕ್ತದಲ್ಲಿಯೇ ಇದೆ ಅ೦ದರು ಸರಿಯಾದೀತು, ನನಗೆ ಇನ್ಯಾವುದೋ ಕಾಣದ ಸೆಳೆತದ ಹುಡುಕಾಟ ಇತ್ತು ಅನಿಸುತ್ತೆ" ನನ್ನ ಮಾತು ಮುಗಿವ ಮೊದಲೇ ಜೋರಾಗಿ ನಕ್ಕಳು ಅವಳು, ತೀರಾ ಅಸಹಜ ನಗು, ನನ್ನ ಹೃದಯ ಬಡಿತ ಮತ್ತೆ ಏರಿತು, ಭಯದಲ್ಲಿ, ಭಯವನ್ನು ಮುಚ್ಚಿಡಲು ಯತ್ನಿಸುತ್ತಾ ಅವಳನ್ನೇ ನೋಡಿದೆ"ಹುಚ್ಚಾ , ಆತ್ಮಸಾಕ್ಷಿ  ಸತ್ತು ಹೋಗಿದೆ ನಿಂಗೆ ಏಳೋ ಎದ್ದೇಳು, ನಿನಗೆ ಪಲಾಯನ ವಾದವಲ್ಲ, ಹತ್ತಿದ್ದು ದೇಹಗಳ ಸುವಾಸನೆಯ ಮತ್ತು, ನಿನ್ನೊಳಗಿನ ಮೃಗ ಕೇವಲ ದೇಹದ ಸಾಂಗತ್ಯ ಅಷ್ಟೇ ಬಯಸಿದ್ದು, ಅದಕ್ಕೆ ಬೇರೆಯ ಹೆಸರಿಟ್ಟು ವಂಚಿಸುತ್ತಾ ಬಂದವ ನೀನು" ಬೆ೦ಕಿಯ ಧಾರೆ ದನಿಯಲ್ಲಿ,
ನಾನು ನಡುಗಿದೆ , "ನಿನೊಂದೆ ಅಲ್ಲ ನಿನ್ನಂಥ ಎಲ್ಲರಿಗು ಇದೊಂದೇ ದಾರಿ ಬದುಕಿನ ಸತ್ಯಗಳನ್ನ ಎದುರಿಸಲಾಗದೆ ಓಡುತ್ತಾ ಓಡುತ್ತಾ ದಾರಿಗಳೇ ಇಲ್ಲದ ಕಡೆ ತಲುಪಿಬಿಡುತ್ತೀರಿ, ನೀನು ನನ್ನಿಂದ ಕಿತ್ತುಕೊಂಡಿದ್ದು ಏನು ಗೊತ್ತಾ, ಪಾಪ ಪ್ರಜ್ಞೆ, ನಾನು ಸತ್ತು ಹುಟ್ಟಿದೆ, ಬಹಳ ಸಲ, ಇನ್ನೀಗ ನಿನ್ನ ಸರದಿ" ನಾನು ಬಾಯ್ತೆರೆವ ಮೊದಲೇ ಅವಳು ನಕ್ಕಳು "ನೀನು ಮದುವೆಯಾಗಿದ್ದೀಯಲ್ಲ, ಸುಖ ಸಿಕ್ಕಿತಾ, ನೀನು ಹುಡುಕುತ್ತಿದ್ದ ಆ ನೆಮ್ಮದಿ, ನನ್ನ ಬಿಟ್ಟು ಇನ್ನೊಂದು ದೇಹದಲ್ಲಿ ನೀನು ಅರಸುತ್ತಿದ್ದ ಆ ನೆಮ್ಮದಿ ಕ್ಷಣವಾದರೂ ಸಿಕ್ಕಿತಾ? ಇರುವ ಇಷ್ಟು ಸಣ್ಣ ಜೀವನವನ್ನ ಹೊಂದಿಕೆ ಇಲ್ಲದೆ ಅಳುತ್ತ ಕಳೆಯುತ್ತೀದ್ದಿ , ನಿನಗೆ ನಂಬಿಕೆ ಇಲ್ಲ ಯಾವುದರಲ್ಲೂ, ಸ್ವತಃ ನಿನ್ನಲ್ಲೂ ,ಅದಕ್ಕೆ ಬರಿ ಭ್ರಮೆಯಾದ ನಾನು ನಿನಗೆ ಕಾಣುತ್ತಿರುವುದು" ಎಂದು ನಕ್ಕಳು, ನಾನು ಅವಳನ್ನೇ ನಂಬಲಾರದವನಂತೆ ನೋಡಿದೆ,  ಕೈ ಚಾಚಿದಳು , ನಾನು ತಪ್ಪಿಸಿಕೊಳ್ಳಲೆತ್ನಿಸಿ ಓದಿದೆ ಓಡಿದೆ ,  ಕೈಗಳು ಕಬಂಧವಾಗಿ ನನ್ನ ಹಿಡಿಯುತ್ತಲೇ ಹಿಂದೆ ಬಂದಿತು , ಅಷ್ಟೊತ್ತಿಗೆ ನಾನು ಟೆರ್ರೇಸಿನ ಮೇಲಿದ್ದೆ , ಕೆಳಗೆ ಹಾರಿದ್ದಷ್ಟೇ ಗೊತ್ತು, ಕಣ್ಣು ಮತ್ತೆ ಕತ್ತಲೆಗಟ್ಟಿತು
ಎಚ್ಚರಾದಾಗ ಎದುರಲ್ಲಿ ಅವಳ ದೇಹ ಇರಲಿಲ್ಲ  ಬಹುಶಃ ನಾನು ಯಾವ ಅವಸ್ಥೆಯಲ್ಲಿ ಕನಸು ಕಂಡೆನೋ , ನನಗೆ ಸತ್ಯ ಸುಳ್ಳುಗಳ ವ್ಯತ್ಯಾಸ ತಿಳಿಯಲಿಲ್ಲ, ಮೊಬೈಲ್ ಆನ್  ಮಾಡಿದೆ ಮನೆಯಿಂದ ಬಂಡ ಬಹಳಷ್ಟು ಕಾಲ್ಗಳು, ಇಲ್ಲ ಇವತ್ತು ಸುಳ್ಳು ಹೇಳಲಾರೆ, ಹೆಂಡತಿಗೆ ಫೋನಾಯಿಸಿದೆ " ಸುಜೀ , " "ರೀ ಏನ್ರೀ  ಎಲ್ಲಿ ಇದ್ದೀರಾ. ಬೇಗ ಬನ್ನಿ " ಇಲ್ಲೆಲ್ಲೋ ಸಿಕ್ಕಾಕಿಕೊಂಡಿದ್ದೀನಿ ಈಗ ಸಮಯ ಎಷ್ಟು ಹೇಳು" "ಅಯ್ಯೋ ಕೈಲಿ ಮೊಬೈಲ್ ಇಲ್ವಾ, ಎಲ್ಲಿದ್ದೀರಾ ಹೇಳಿ, ನಾನು ವಿಳಾಸ ಕೊಟ್ಟೆ, ನಂತರ ಒಳ ಹೋಗಿ ನೀರು ಕುಡಿದು ಸೋಫಾದ ಮೇಲೆ ಕಾಲುಚಾಚಿದೆ , ಅವಳ ಬಿಸಿಯುಸಿರು ನನ್ನ ಎದೆಗೆ ತಾಕುತ್ತಿತ್ತು ಸಣ್ಣದಾದ ಮುಗುಳ್ನಗುವು, ಹೂ ಮಳೆಯ ಬಳದಿಂಗಳಲ್ಲಿ ನಾನು ಅವಳ ಕೈ ಹಿಡಿದ ಕ್ಷಣಗಳೆಲ್ಲ ಕಣ್ಣೆದುರೇ ನಡೆಯಲಾರಂಭಿಸಿದವು , ಮನೆಯ ಬಾಗಿಲು ತಟ್ಟಿದ ಶಬ್ದ , ನಂತರ ತೆರೆದ ಶಬ್ದ , ನಾನು ದಿಗ್ಭ್ರಮೆ ಹಿಡಿದವನಂತೆ ನೋಡುತ್ತಿದ್ದೆ,
ನನ್ನ ಹೆಂಡತಿಯನ್ನು ಒಳಗೆ ಬರ ಮಾಡುತ್ತಿದ್ದವಳು ಅವಳು, ಹಿಂದೆಯೇ ದೀಪಾ , ಸ್ಯಾಮ್ಯುಯೆಲ್ ಎಲ್ಲರು ಒಳ ಬಂದರು,
ಅವಳು ನನ್ನ ಕಡೆ ಕೈ ತೋರಿಸಿ ಗಾಭರಿ ಇಂದ ಏನೋ ಹೇಳುತ್ತಿದ್ದಳು, ನನ್ನ ಹೆಂಡತಿ ಚೀರಿದ್ದು ಕೇಳಿಸಿತು, ಜತೆಗೆ ಜೋರಾಗಿ ಅಳುವ ಶಬ್ದವೂ , ನಾನು ಅತ್ತಲೂ ಹೋಗಲಾಗದೆ ಅವಳನ್ನು ಬಿಡಲಾಗದೆ ಹೂಮಾಲೆಯ ಹಾದಿಯಲ್ಲಿ ಅಲೆಯುತ್ತಿದ್ದ ಭ್ರಮೆಗೆ ಸಿಕ್ಕಿದೆ,
ಸತ್ತಿದ್ದು ಯಾರು, ನನಗೆ ನಿಜವಾಗಲೂ ತಿಳಿಯುತ್ತಿಲ್ಲ

No comments:

Post a Comment