Tuesday, August 22, 2017

ಅಪ್ಪ ಹೇಳಿದ ನಿಯಮಗಳು

ಇದು ಈಗ ಕಲಿಕೆಯ ಸಮಯ ಅತಿಯಾಗಿ ಜಾತಕ ಫಲವನ್ನು ನಂಬದ ನಾನು ಅಪ್ಪ ಹೇಳಿದ್ದೆಲ್ಲ ನಿಜವಾಗುವಾಗ ಬಾಯಿಯ ಮೇಲೆ ಬೆರಳಿಟ್ಟಿದ್ದೇನೆ, ಅಪ್ಪನಿಗೆ ವಯಸ್ಸಾಯಿತು, ಈಗೀಗ ಪುಸ್ತಕ ಓದಲು ಕೂಡ ಅವರಿಗೆ ತೊಂದರೆ ಆಗುತ್ತಿದೆ, ಆದರೆ ಅವರ ಬುದ್ಧಿ ಮಾತ್ರ ಚುರುಕಾಗಿಯೇ ಇದೆ,  ಬರಿ ಹೆಸರಿಗೆ ಕೃಷ್ಣಮೂರ್ತಿಯಲ್ಲ,ನನ್ನ ತಂದೆ ಅಕ್ಷರಶಃ ಆ ಕೃಷ್ಣನ ಜೀವನದಲ್ಲಿ ಬಂದಷ್ಟೇ ಕಷ್ಟಗಳ  ಸರಮಾಲೆಯನ್ನು ದಿಟ್ಟವಾಗಿ ಎದುರಿಸಿದವರು, ತತ್ವಶಾಸ್ತ್ರ ಮತ್ತು ಬೃಹತ್ ಜಾತಖಾಕ್ಯ , ಭರ್ತೃಹರಿ ಕಾಳಿದಾಸ ಎಲ್ಲರನ್ನ ಓದಿಕೊಂಡವರು, ಸತತ ಮುವ್ವತ್ತು ವರ್ಷಗಳಿಂದ ಬಿಡದೆ ವಿಷ್ಣು ಸಹಸ್ರನಾಮ ಪಾರಾಯಣವನ್ನು ಚಾಚು ತಪ್ಪದೆ ನಡೆಸಿಕೊಂಡು ಬರುತ್ತಿರುವವರು. ಒಂದು ತೂಕದಲ್ಲಿ ಸಮತೋಲದಲ್ಲಿ ಬದುಕನ್ನ ಅದು ತಂದೊಡ್ಡುವ ಸವಾಲುಗಳನ್ನ ಎದುರಿಸಿ ಮನಸ್ಸಿನ ಶಾಂತಿಯನ್ನ ಕಾದಿಟ್ಟವರು, ಈ ಇಳಿ  ವಯಸ್ಸಿನಲ್ಲೂ ಅವರು  ಕಾಯಿ ಸುಲಿ ಯುತ್ತಾರೆ, ಕೆಲವೊಮ್ಮೆ ಅನಿವಾರ್ಯವಾಗಿ ಬರುವ ಮನೆಯ ದೈಹಿಕ ಶ್ರಮಗಳನ್ನು ದೇಹದ ನೋವುಗಳನ್ನು ಲೆಕ್ಕಿಸದೆ  ಹೊರುತ್ತಾರೆ, ಇಂತಹ ಪ್ಪನನ್ನ ಪಡೆದ ನನ್ನ ಪುಣ್ಯ ದೊಡ್ಡದು, ಬಹುಶಃ ಅಮ್ಮ  ನನ್ನಮ್ಮನು ಅಷ್ಟೇ, ಅಪ್ಪ ಮುಖಪುಟವಾದರೆ ಅಮ್ಮ ಒಳಗಿನ ತಿಳಿಹೂರಣ, ಅಪ್ಪನ ಬದುಕಿನ  ಸಾರವೆಲ್ಲ ಅಮ್ಮನ ಚುರುಕುತನದಲ್ಲಿದೆ ಅಪ್ಪ ಮಿತಭಾಷಿ. ಎಂಬತ್ತರ ಹತ್ತಿರದಲ್ಲಿರುವ ಆಪ್ಪಾ ನನಗೆ ದೇವರಿಗಿಂತ ಮೊದಲು ನೆನಪಾಗುವ ನನ್ನ ದೇವರು. 
ಮೊನ್ನೆ ಮನೆಯ ಯಾವ್ಯಾವುದೋ ಸಮಸ್ಯೆಗಳ ಸಲುವಾಗಿ ಕರೆ ಮಾಡಿದ್ದೆ, ಆಗ ಮಾತಾಡಿದ ಅವರು ನನ್ನ ಜಾತಕವನ್ನು ಪರಿಶೀಲಿಸಿ, ನನ್ನವನದನ್ನು ಪರಿಶೀಲಿಸಿ, ಅದರ ಫಲಗಳನ್ನು ಅದು ತಂದೊಡ್ಡಬಹುದಾದ ಅಪಾಯ ಮತ್ತು ಮಾನಸಿಕ ಸಂಕಷ್ಟಗಳನ್ನು ಹೇಳುತ್ತಾ, ನನಗೆ ಕೆಲವು ಪ್ರಶ್ನೆಗಳನ್ನು ಕೇಳಿದ್ದರು, ಆಶ್ಚರ್ಯಕರವಾಗಿ ಅವರು ಹೇಳಿದ ಎಲ್ಲ ಉತ್ತರಗಳು ನನ್ನ ಸಧ್ಯದ ಪರಿಸ್ಥಿತಿಗಳನ್ನು ಕರಾರುವಕ್ಕಾಗಿ ತಿಳಿಸಿದ್ದವು. ಅಪ್ಪನ ಹತ್ತಿರ ನಾನು ಯಾವಾಗಲೂ ವಾದಿಸುತ್ತೇನೆ, ಇದೆಲ್ಲ ಹೇಗೆ ಸಾಧ್ಯ ಎಂದು, ಆದರೆ ಅಪ್ಪ ಇದನ್ನು ಒಂದು ಗೆಸ್  ಗೇಂ ಅನ್ನೋದನ್ನ ಒಪ್ಪೋದಿಲ್ಲ, ಅದು ಬಹಳ ಕರಾರುವಾಕ್ಕು ಮತ್ತು  ವಿಜ್ಞಾನ  ಅನ್ನುತ್ತಾರೆ, ಅದಕ್ಕಿಂತಲೂ ಮೀರಿದ್ದು ಕೂಡ ಮತ್ತೊಂದಿದೆ, ಅದು ನಮ್ಮ ಆತ್ಮವಿಶ್ವಾಸ ಮತ್ತು ಕಷ್ಟ ಸಹಿಷ್ಣುತೆ ಅಂತನ್ನುತ್ತಾರೆ, ಅವರು ಹೇಳಿದ ಯಾವ ವಿಷಯವು ಕೂಡ ನನ್ನ ಪಾಲಿಗೆ ಸುಳ್ಳಾಗಿಲ್ಲ, 
ಮೊನ್ನೆ ಅವರು ಹೇಳಿದ ಮಾತುಗಳು ನನ್ನ ಯಾವತ್ತಿಗೂ ಎಚ್ಚರಿಸುತ್ತಿರುತ್ತವೆ, ಇದನ್ನ ನಿಮ್ಮ ಜತೆ ಹಂಚಿಕೊಳ್ಳುವೆ 
೧) ಕಷ್ಟಗಳು ನೋವುಗಳು ಆಪಮಾನಗಳನ್ನು ಎದುರಿಸದ ಯಾವ ಜೀವವು ಜಗತ್ತಿನಲ್ಲಿಲ್ಲ, ಹಾಗಾಗಿ ನಾವು ನಮ್ಮ ಪಾಲಿಗೆ ಕಷ್ಟಗಳು ಬಂದಾಗ ಮನಸ್ಸು ಗಟ್ಟಿ ಮಾಡಿ ಸುಮ್ಮನಾಗಬೇಕು, ಕೆಲವಕ್ಕೆ ಸಮಯ ಕೂಡಿಬಂದಾಗಲೇ ಪರಿಹಾರ ಸಿಗುವುದು, ಅಲ್ಲಿಯತನಕ ಸತತ ಜೇಡನಂತೆ ಪರಿಶ್ರಮಿಸುತ್ತಿರಬೇಕು 
೨) ದೇವರು ಎಂದರೆ ಒಂದು ನಂಬಿಕೆ, ಅದು ಶ್ರದ್ಧೆ, ವಿಗ್ರಹ ರೂಪದಲ್ಲಿರುವ ದೇವರಿಗಿಂತ ನಮ್ಮ ಆತ್ಮಸಾಕ್ಷಿಯೇ ಮಿಗಿಲು ದೇವರು. 
೩) ಇನ್ನೊಬ್ಬರನ್ನು ನೋಯಿಸುವುದು ಸುಲಭ, ಆದರೆ ಅವೇ ನೋವುಗಳು ನಮಗೆ ಕಂತುಗಳಲ್ಲಿ ಹಿಂದಿರುಗುತ್ತದೆ, ಇದರ ಲೆಕ್ಕದ ಪಟ್ಟಿ ಯಾವ ಚಿತ್ರಗುಪ್ತನ ಕೈಯಲ್ಲೂ ಇಲ್ಲ, ಮಾಡಿದ ಪಾಪವನ್ನು ತೊಳೆಯಲು ಯಾವ ದೇವರು ನೆರವಾಗಲಾರ, ಹಾಗಾಗಿ ನೋಯಿಸುವ ಮೊದಲು, ಪಾಪಕ್ಕೆ ಮೊದಲು ವಿವೇಕವನ್ನು ಜಾಗೃತ ಇಡಬೇಕು. 
೪) ನಾವು ಬಯಸಿದ್ದೆಲ್ಲ, ಅಥವಾ ನಮ್ಮದು ಅಂತ ಅಂದುಕೊಂಡದ್ದೆಲ್ಲ ನಮ್ಮದಾಗಿರಲೇ ಬೇಕು ಅಂತಿಲ್ಲ, ಕೆಲವೊಮ್ಮೆ ನಮಗೆ ಅದು ದಕ್ಕಲಿಲ್ಲ ಅಂದರೆ ಅದಕ್ಕಿಂತ ಉನ್ನತವಾದದ್ದು, ಅದಕ್ಕಿಂತ ಬಹಳ ಯೋಗ್ಯವಾದದ್ದು ಬೇರೇನೋ ನಮ್ಮ ಪಾಲಿಗಿದೆ ಅನ್ನುವ ಸರಳ ವಿಷ್ಯ ಅರ್ಥ ಮಾಡಿಕೊಳ್ಳಬೇಕು, ಹರಿವ ನೀರಿನಂಥ ಜೀವನವನ್ನ ಕೊಳಕು ಮಾಡಿಕೊಳ್ಳಬಾರದು. 
೫) ನಡೆದು ಹೋದದ್ದನ್ನು ಮರೆಯಬೇಕು, ಉಪಕಾರ ಮಾಡಿದವರನ್ನು ನೆನೆಯಬೇಕು, ಮತ್ತು ಮರೆಯದೆ ಹಣಕಾಸಿನ ಸಹಾಯವನ್ನು ಹಿಂದಿರುಗಿಸಲು ಬೇಕು  ಅದು  ಪುರಂದರದಾಸರು ಹೇಳಿದಂತೆ ಕೆಟ್ಟದ್ದು ಮಾಡುವುದು, ಋಣ ಸಂಚಯವು ಮನುಷ್ಯನನ್ನು ಜನ್ಮಾಂತರಗಳ ಕಾಲ ಬಂಧಿಸುತ್ತದೆ, "ದುಗ್ಗಾಣಿ ಬಲು ಕೆಟ್ಟದಣ್ಣ " ಮರೆಯಬಾರದು. 
೬)ನನಗೇ ಯಾಕೆ ಕಷ್ಟ ಅಂತ ಕೇಳಲೇ ಬಾರದು, ಅದು ಇದ್ದರೇನೇ ಬದುಕು ಬೆಲೆ ಬರುವುದು. 
೭) ಇಂತಹ ಸಮಯದಲ್ಲೂ ಮೋಹಕ್ಕೆ ಬಲಿ  ಬೀಳಬಾರದು, ಇಷ್ಟಪಟ್ಟ ದೇಹ ಯೌವನ ಹಣ ಯಾವುದನ್ನು ನಾವು ಜತೆಗೆ ಕೊಂಡೊಯ್ಯಲಾಗದು ಇದ್ದಷ್ಟು ಕಾಲವು ನಾವು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ ಅನ್ನುವುದನ್ನ  ಮರೆಯಬಾರದು. 
೮) ಸತ್ಯ ಬಹಳ ಕಹಿಯಾದ ಔಷಧ ಅದನ್ನು ಕುಡಿಯದಿದ್ದರೆ ರೋಗ ವಾಸಿಯಾಗುವುದಿಲ್ಲ. ಸತ್ಯ ಒಂದಲ್ಲ ಒಂದು ದಿನ ಹೊರ ಬರಲೇ ಬೇಕು ಹಾಗಾಗಿ ಸುಳ್ಳಿನ ಸಾಂಗತ್ಯ ಮಾಡಬಾರದು 
೯) ಕೆಟ್ಟ ಸಮಯವೂ, ಕೆಟ್ಟ ಸ್ನೇಹಿತರನ್ನು ಮಾನಸಿಕವಾಗಿ ತುಂಬಾ ಕೆಳಮಟ್ಟದ ವ್ಯಕ್ತಿಗಳನ್ನು ಜೀವಕ್ಕೆ ಹತ್ತಿರ ತಂದು ವ್ಯವಹರಿಸುತ್ತದೆ, ಅಲ್ಲಿ ಆ ದಿನಗಳನ್ನು ಉಪಾಯವಾಗಿ ದಾಟಬೇಕು, ಅವರ ಸಾಂಗತ್ಯಕ್ಕೆ ಸ್ನೇಹಕ್ಕೆ ಸಿಕ್ಕಿಕೊಳ್ಳಬಾರದು. 
ಕೊನೆಯದಾಗಿ ನನಗೆ ಹೇಳಿದ್ದು "ವಸ್ತುಗಳನ್ನು ಕೊಳ್ಳಬೇಡಿ ನೆನಪುಗಳನ್ನು ಕೊಳ್ಳಿ "
ನನ್ನಪ್ಪನಿಗೆ ನನ್ನ ಸಾಷ್ಟಾಂಗ ವಂದನೆಗಳು, ನಾನು ಅವರ ಕಿರು ಬೆರಳ ತುದಿಗೂ ಸಮನಲ್ಲ ಆದರೆ ನನ್ನ ಪ್ರಯಾಣ ಈಗ ಶುರುವಾಗಿದೆ, ಹಾಗೆಯೇ ಪ್ರಯಾಣದಲ್ಲಿ ಕೆಲವು ಬಿಟ್ಟು ಹೋಗಲೇ ಬೇಕಾದ ತಾಣಗಳನ್ನು ಮತ್ತೊಮ್ಮೆ ಸಂದರ್ಶಿಸಿ ಬರುತ್ತಿದ್ದೇನೆ, ಮುನಿಸಿಕೊಂಡ ಸ್ನೇಹಿತೆ,ಸ್ನೇಹಿತರು , ತಪ್ಪು ತಿಳುವಳಿಕೆಯಲ್ಲಿ ದೂರಾದ  ಆಪ್ತರು, ಮತ್ತು ನನ್ನ ಕೆಲವೇ ಗತ ಪ್ರೇಮದ ನೆನಪುಗಳನ್ನು ಹಾಗೆಯೇ ಅಲ್ಲಿಯೇ ಇದ್ದಂತೆ ಬಿಟ್ಟುಹೋಗಲು ಸಂದರ್ಶಿಸುತ್ತಿದ್ದೇನೆ, ಇನ್ನು ಬಹುಶಃ  ಹಿಮ್ಮುಖವಾದ ನಡಿಗೆ ಸಾಧ್ಯವಾಗಲಾರದು, ಹಾಗಾಗಿ ಅಳಬೇಕಾದಾಗಲೆಲ್ಲ ಅತ್ತು, ಎಲ್ಲೆಲ್ಲಿ ಅವರು ತಮ್ಮ ಲೋಕದಲ್ಲಿ ಆನಂದವಾಗಿ ಇರುವುದನ್ನ ನೋಡಿ ಸಂತಸ ಪಟ್ಟು, ಮುಂದುವರೆಯುತ್ತಿದ್ದೇನೆ, ಬಹುಶಃ ಇದರಿಂದ ಅರ್ಥವಾದದ್ದು ಒಂದೇ, ನಾನು ಅಂತರಂಗದಲ್ಲಿ ಬಹಳ ಸುಖಿ, ನನ್ನ ಅಪ್ಪನ ಮಾರ್ಗದರ್ಶನ ಗುರುವಿನ ಕರುಣೆ ನನ್ನ ಸಮತೋಲನದತ್ತ ನಿಜವಾಗಲೂ ಕೊಂಡೊಯ್ಯುತ್ತಿದೆ. ಮತ್ತು ಅಪ್ಪನ ಹರಕೆಯೊಂದು ಫಲಿಸಲಿ, ನನ್ನ ಬದುಕು ನಿಜವಾದ ಅರ್ಥದಲ್ಲಿ ಸಾರ್ಥಕವಾಗಲಿ. ಅಷ್ಟೇ ನನ್ನ ಆಶಯ, ಬಹುಶಃ ನನ್ನಪ್ಪನದೂ  ಕೂಡ . ಜಾತಕ ಫಲವನ್ನು ನೀವು ನಂಬುವಿರೋ ಬಿಡುವಿರೋ ಅಪ್ಪ ಹೇಳಿದ ನಿಯಮಗಳಂತೂ ಇಂದಿಗೂ ಸತ್ಯ  ಅಲ್ಲವಾ?




2 comments:

  1. ಈ ಲೇಖನಕ್ಕೆ ನಾನು ಬಹಳವಾಗಿ connect ಆದೆ

    ReplyDelete
    Replies
    1. hmmm...appandire haage, avru bayasodu namma olleyadashte!

      Delete