Thursday, September 26, 2013

ಈ ದಿನ ಜನುಮ ದಿನ..ಶುಭಾಶಯ ನನ್ನ ಶುಭಾಶಯ...

ಮಕ್ಕಳು ನಮ್ಮ ಪುಣ್ಯದ ಪ್ರತೀಕ ಅನ್ನುತಾರೆ ಬಲ್ಲವರು..ಆದರೆ ಪುಣ್ಯವೇ ಮಗುವಾದರೆ?? ನಾನೇನು ಮಗು ಬೇಕೆಂದು ಹಂಬಲಿಸಿದವಳಲ್ಲ..ಅದಕ್ಕಾಗಿ ಕಾದದ್ದೂ ಇಲ್ಲ..ಬದುಕು ನನ್ನ ಹೆಣ್ತನಕ್ಕೆ ಸಾಕ್ಷಿ ಕೇಳಿದ ಸಮಯ..ಆದದ್ದಾಗಲಿ ಎನ್ನುವ ಮನೋಭಾವನೆ ಇತ್ತು..
ಪುಟ್ಟ ಅಳುಕೊಂದನ್ನ ಹೊತ್ತು ನವಮಾಸಗಳು ಇವನನ್ನ ಮಾತಾಡಿಸುತ್ತಲೇ ಜಗತ್ತನ್ನ ಮರೆತು ಬದುಕಿದೆ..ಅವನೂ ಅಷ್ಟೇ,ಜಾಸ್ತಿ ನೋವ ನೀಡದೆ ಹೊರಜಗತ್ತಿಗೆ ಬಂದವ...ಅಮ್ಮನ ಪ್ರೀತಿ ಅಪ್ಪನ ಕಾಳಜಿ ೫ ತಿಂಗಳು ದೊಡ್ಡವನಾದದ್ದೆ ಗೊತ್ತಾಗಲಿಲ್ಲ..ಹಸುಗೂಸೊಂದನ್ನ ಸೊಂಟದ ಮೇಲಿಟ್ಟು ಬೆಂಗಳೂರಿಗೆ ಬಂದಿಳಿದಾಗಿನಿಂದ ಇಲ್ಲಿಯವರೆಗೆ ಬದುಕು ಓಡುತ್ತಲೇ ಇದೆ ..
ಇವನ ಜೊತೆಯಲ್ಲಿ ನಾ ಬೆಳೆದೆ..ಕಲಿಸಿದ್ದಕ್ಕಿಂತ ಕಲಿತದ್ದೆ ಜಾಸ್ತಿ..ನನ್ನ ಹಟ ಸ್ವಭಾವ ತಳ್ಮೆಯಾಯ್ತು..ಇವನ ಸಂಗದಲ್ಲಿ ಕನಸಿನ ಚಿಟ್ಟೆಯ ರೆಕ್ಕೆಗೆ ಬಣ್ಣ ಬಂತು..ತುಂಬಿದವ ಇವನೇ..ಮನಸಲ್ಲಿ ತುಂಬಿದ್ದ ರಾಮಕೃಷ್ಣರು ಇವ ಭವತಾರಕ ಎಂದೆನ್ನುತಿದ್ದರೆ  ಮನಸು ಅಹುದಹುದೆನ್ನುತ್ತಿತ್ತು..ನಿಜವಾದ ಗುರು ಇವನು...ನನ್ನ ಸ್ವಾತಂತ್ರ್ಯಕ್ಕೆ ರೆಕ್ಕೆ ಬಂದದ್ದು ಇವನಿಂದ..ನನ್ನ ಬರವಣಿಗೆಯ ಸ್ಪೂರ್ತಿ ಇವನೇ..
ಇಂತಿಪ್ಪ ಇವನಿಗೀಗ ನಾಲಕ್ಕು ವರ್ಷ..
ನನ್ನ ಭುವನಚಂದ್ರ ..ನೀ ಗುರುವಾಗು..ಚೇತನವಾಗು..ನಾಲ್ಕು ಜನರ ಹೊತ್ತಿನ ತುತ್ತಿಗೆ ಕಾರಣನಾಗು..ಮಗೂ ಜಗತ್ತು ಮರೆಯದ ರತ್ನವಾಗು..ನನ್ನ ಬಳಿ ನಿನಗಾಗಿ ಪ್ರೀತಿಯೊಂದು ಬಿಟ್ಟರೆ ಇನ್ನೇನೂ ಇಲ್ಲ..ಅದೊಂದೆ ನಿನ್ನ ಅಮ್ಮನ ಆಸ್ತಿ...ಇದಷ್ಟೇ ನನ್ನ ಎದೆಯಾಳದ ಹಾರೈಕೆ!!