Wednesday, April 10, 2013

ಬೆಳಕು-ಅವಳು ಮತ್ತೆರಡು ಕಥೆಗಳು

ಯುಗಾದಿ ಬಂದಿದೆ..ನಾವೆಲ್ಲಾ ಕಾಲನ ಚಕ್ರಕ್ಕೆ ತಲೆಕೊಟ್ಟು ನಿಂತಿದ್ದೇವೆ ಮತ್ತೆ  ಭೂತ-ವರ್ತಮಾನ-ಭವಿಷ್ಯಗಳ ಅದೇ ಗೊಂದಲದ ನಡುವೆ,ಬದುಕು ಕೆಲವರಿಗೆ ಭಾರೀ ಬದಲಾದರೆ,ಕೆಲವರಿಗೆ ಪರವಾಗಿಲ್ಲ ಎನ್ನಿಸಿತೋ?, ಇನ್ನೂ ನನ್ನಂತವರಿಗೆ ಕಾಡಿಗೆಯ ಕಂಗಳ ನಡುವೆ ಕಣ್ಣೀರ ಮುಚ್ಚಿಟ್ಟು..ಸಿಹಿ ಮಾತುಗಳ ನುಡಿಸಿ..ಕಹಿಯಾಗಿ ನಗುವುದ ಕಲಿಸಿದೆ!!ಕಾಲನೇ ನಿನ್ನ ವಿಶ್ವರೂಪಕ್ಕೊಂದು ನಮನ....ಮತ್ತಷ್ಟು ಸ್ರವಿಸುವ ಋತುಗಳು..ಇನ್ನಷ್ಟು ಉದ್ದದ ಬದುಕು..ನಿರಂತರ ಅಭಾವ ವೈರಾಗ್ಯ..ನಿನ್ನ ಕಾಲವೋ ನನ್ನ ಕಾಲವೋ ಮುಗಿಯುವಷ್ಟು ಬದುಕು..ಸಾರ್ಥಕವಾಗಿದ್ದರೆ ಸಾಕು..ಶುಭಾಶಯಗಳು ನನ್ನೆಲ್ಲ ಬಂಧುಗಳಿಗೆ..ಎಲ್ಲಕ್ಕಿಂತ ಸವಿ ಸ್ನೇಹದ್ದು..ಅದು ಬೆಲ್ಲವನ್ನು..ವಾಸ್ತವದ ಬೇವಿನ ಕಹಿಯನ್ನೂ ಮರೆಸಿ ಬಿಡುತ್ತದೆ..

ಬೆಳಕಿಗೂ ಹುಡುಕಾಟಕ್ಕೂ ಆಧ್ಯಾತ್ಮಕ್ಕೂ ಮುಗಿಯದ ನಂಟು..ಕೆಳಗಿನೆರಡು ಭಾವಬಿಂದುಗಳು (ಕಥೆ ಎನ್ನಲಾರೆ..ಅದನ್ನು ನೀವೇನು ಕರೆಯಬಹುದು) ನಿಮಗಾಗಿ..ಓದಿ..ಅನಿಸಿಕೆ ತಿಳಿಸಿ...

ಬೆಳಕು -೧


ಕತ್ತಲಿತ್ತು..ನಸು ಕತ್ತಲಿಗೂ ಮೂಡಣದ ಉಷೆಗೂ ನಿಲ್ಲದ ವಾದ-ಪ್ರತಿವಾದದ ಸಮಯ..
ಇಲ್ಲಿ ಆಕೆ ಕಾದದ್ದು ಇವರಿಬ್ಬರಿಗೂ ಅಲ್ಲ..ಗೊತ್ತು ಗುರಿ ಇರದ ಪಯಣದಲಿ ಸಿಕ್ಕು ಮರೆಯಾದ ಅವನಿಗಾಗಿ...
ಹುಡುಕುವ ಭ್ರಮರ..ಎಲ್ಲ ಬಂಧಗಳ ಬಿಟ್ಟು ಅವನ ಆಸೆ ಹೂ ಗಂಧದ ಬೆನ್ನು ಹತ್ತಿದ ತಿತಲಿ..
ತನ್ನ ಗುರುತ್ವಾಕರ್ಷಣೆಯ ಮೀರಿದ ಅದ್ಯಾವದೋ ಅಯಸ್ಕಾಂತೀಯ ಸೆಳೆತಕ್ಕೆ ಅರಿವಿಲ್ಲದೆ ಸಿಕ್ಕಿದ ಕಬ್ಬಿಣದ ತುಂಡು..
ತಾನು ಮೀರಾಳೋ ರಾಧೆಯೋ ಇನ್ನೇನೊ ಇರಬಹುದಾದ ಕಲ್ಪನೆ ಆಕೆಗೆ ಇದ್ದಂತಿಲ್ಲ..
ಬೇಟಕ್ಕೆ ಕಾದ ಹೆಣ್ಣು ಹುಲಿಯೇ? ಅನಿಸುತ್ತಿಲ್ಲ..ಮುಖದಲ್ಲಿ ಮುಗ್ಧತೆ..ಕೆನ್ನೆಯಲ್ಲಿ  ಮೂಡಣದ್ದೆ ಕೆಂಪು,
ಕಣ್ಣಲ್ಲಿ ಯಾರನ್ನೋ ಹುಡುಕುತ್ತಿರುವ ಸೂಚನೆ..
ಯಾರದ್ದೋ ನೆರಳಾಡಿತು..ಅವನೇ ಇರಬೇಕು..ಕಣ್ಣರಳಿತು..
ಮತ್ತೆ ಸಣ್ಣಗಾದ ಪಾಪೆಯಲ್ಲಿ ಕಂಡದ್ದು ಅವನದಲ್ಲ..ಇವನ ಬಿಂಬ..
ಯಾಕೆ ಬಂದೆ? ಎನ್ನಲಿಲ್ಲ..
ಅವನು ಸುಡುವ ಬೆಂಕಿಯ ಕಣ್ಣಲ್ಲಿ ಹೊತ್ತಿದ್ದ ಕಾಮಣ್ಣ..
ಆಸೆಗಳ ಬಳ್ಳಿಯಲ್ಲಿ ಅರಳಿದ್ದ ಹೂವು ಕಮರಿಬಿಡಬೇಕು ಅವನ ಕಾಮಾಗ್ನಿಯಲ್ಲಿ..
ಕೈ ಹಡಿದ..ಹತ್ತಿರಕ್ಕೆಳೆದ..
ದೇಹದ ಕಣಕಣವೂ ಮಿದುವಾಗುವ ಸಮಯ..ಅವನ ಬಲಿಷ್ಟ ಹಿಡಿತದಲ್ಲಿ..
ಅವಳ ಹೆಣ್ತನ ಎಂದಿನಂತೆ ಕರಗಲೇ ಬೇಕು..
ಆದರೆ?..
ಅವನ ಸುರತದ ಕರೆಗೆ ಆವಳ ದೇಹ ಕೆರಳಲಿಲ್ಲ..
ಅವನ ಸ್ಪರ್ಶದ ಮೋಡಿಗೆ ದೇಹ ವೀಣೆ ಮಿಡಿಯಲಿಲ್ಲ..
ಅವ ಅವಳ ಇಡಿ ಇಡಿಯಾಗಿ ಜಾಲಾಡಿ ಸೋತ..
ಅಹಂ ಬೆವರಾಗಿ ಹರಿದಿತ್ತು..ಆಕೆ ಇದ್ದಳು ಕೊರಡಿನಂತೆ..
ಅವಳ ಅವನೆಂದು ಇವನಾಗಲು ಸಾಧ್ಯವಿಲ್ಲ......
ಮತ್ತೆ ಹೋಗುವ ಮುನ್ನ..
ಅವನ ತುಟಿಗಳಲ್ಲಿದ್ದದ್ದು ಪ್ರಶ್ನೆ.. ಯಾಕೆ ಹೀಗಾಯ್ತು?..
ಅವಳ ಮನಸು ಉತ್ತರಿಸಿತ್ತು.."ಅಂದು ನೀ ಅವನಾಗಿದ್ದೆ ಪ್ರೇಮ ಮೂರ್ತಿ..ಇಂದು ಕೇವಲ ನೀನು ಸ್ವಾರ್ಥಿ!!  ನೀನವನಲ್ಲ!!" ಕಾಮದ ಕತ್ತಲು ಓಡಿತ್ತು..ಬೆಳಕು ಗೆದ್ದಿತ್ತು..

ಬೆಳಕು ೨


"ನಾ ಬರಲೇ?" ಧ್ವನಿಯೊಂದು ಕೇಳಿತು..
"ನಾತಿಚರಾಮಿ" ಎಂದು ಕೈ ಹಿಡಿದ ಜೀವವ್ಯಾವುದೋ "ನಾನೊಲ್ಲೆ" ಎಂದು ದೂರ ಸರಿಯಿತು..
ನಾನಂದೆ"ಇದು ಬಲು ದೂರದ ಪಯಣ..ನಿಲ್ಲಲಾಗದು..ಅಂತ್ಯವಿಲ್ಲ..ಬರುವೆಯಾದರೆ ಬಾ ಜೊತೆಗೆ"
ಉಹುಂ...ಧ್ವನಿ ಮತ್ತೆ ಮರೆಯಾಯಿತು..
ನಾ ನಡೆಯುತ್ತಲೇ ಇದ್ದೇನೆ..ಬೆಳಕಿರದ ದಾರಿಯಲ್ಲಿ..
ನಡು ನಡುವೆ ಬೆಳಕ ತೋರುವುದು ಪುಟ್ಟ ದೀಪದ ಕುಡಿಯೊಂದು..
ಸಣ್ಣ ಹಣತೆಯೊಂದು..ಕೇಳುವುದು"ಅಮ್ಮಾ..ಇಷ್ಟು ಬೆಳಕು ಸಾಕೇ"
ನಿಂತಿಲ್ಲ ನನ್ನ ಪಯಣ..ದೂರದಿ ರಿಂಗಣಿಸುವ ನೆನಪುಗಳ ಜಾತ್ರೆಯ ಸದ್ದು..
ನಡುನಡುವೆ ಕಿವಿಗಡಚಿಕ್ಕುವ ವಾಸ್ತವದ ಸಿಡಿಮದ್ದು..
ಎಲ್ಲಾ ಬರೀ ಶಬ್ದಗಳು..ನೋಟಕ್ಕೆ ನಿಲುಕದ ಅಸ್ಪಷ್ಟ ಚಿತ್ರಗಳು..
ಈ ಕತ್ತಲ ಕೂಪದಲ್ಲಿ ಹೃದಯದ ಕದವ ಹುಡುಕುವದೆಂತು??ತೆರೆಯುವದೆಂತು??
ಓ ಬೆಳಕೇ..ನಿನ್ನೆಡೆಗೆ ನಡೆಯುತ್ತಲೆ ಇದ್ದೇನೆ..ಆದರು ಈ ಬದುಕ ಯಾತ್ರೆ ಮುಗಿಯದಲ್ಲ..
ಇನ್ನೆಷ್ಟು ದಿನ ಈ ಒಂಟಿ ಪಯಣ ..

ಆಯಾಸಕ್ಕೆ ಒಮ್ಮೆ ನಿಂತು ನೋಡಿದರೆ ಅದು ಚಂದ್ರನಿರದ ನಭ..
ತಾರೆಗಳ ಕಿತ್ತು ತಿನ್ನುವಾಸೆಯಾಯ್ತು..ಕೈ ಚಾಚಿದೆ..ಕಣ್ಣು ಒದ್ದೆಯಾಯ್ತು..
ಅವನೆಲ್ಲಿಯ ಚಂದ್ರಮ??ಬದುಕಿಗೆ ಬೆಳಕು ತರುವನೆಂದ..
ಬಲು ದೊಡ್ಡ ಸ್ವಾರ್ಥಿ..ತನಗೆ ಬೇಕೆಂದಾಗ ಓಲೈಸುವ..ಬೇಡವೆಂದಾಗ ನನ್ನಿರವ
ಕಿತ್ತೆಸೆದು ಅಮವಾಸ್ಯೆಯಾಗುವನು..
ಜೀವವೇ ಮಿಡುಕದಿರು..ಆರಂಭವಿದೆ..ಅಂದರೆ ಅಂತ್ಯವಿರಲೇ ಬೇಕು..
ಅವರವರ ಬಾಳ ಪಯಣ ಅವರು ನಡೆಯಲೇ ಬೇಕು..
ಇಂದಲ್ಲ ನಾಳೆ ಬೆಳಕಿನ ಲೋಕಕ್ಕೆ ನಿನ್ನ ಕತ್ತಲ ಲೋಕ ತೆರೆಯಲೇ ಬೇಕು...
ಎಂದು ಮನಸಿಗೆ ಬುದ್ಧಿ ಹೇಳಿದ್ದೇನೆ..ನಾನೂ ನಡೆದಿದ್ದೇನೆ..
ನನ್ನಂತೆ ನೀವೂ...ನಿಮಗೆ ನೀವಿದ್ದ ಹಾದಿ ನಸು ಬೆಳಕಿರಬಹುದು..
ನಡುನಡುವೆ ಈ ಜಾತ್ರೆಯ ಸವಿಯಬಹುದು..ಅದು ನಿಮ್ಮ ವೈಭೋಗ..
ನನಗೆ ದಕ್ಕಿದುದು ಇಷ್ಟೇ..ಯಾಕೆಂದರೆ ನನ್ನ ಗುರಿ ಬೇರೆ ಇದೆ..
ಅದಕ್ಕೆ ನಡೆಯುತ್ತಲೇ ಇದ್ದೇನೆ..
ಒಂಟಿಯಾಗಿ..
ಅವನ ಬೆಳಕ ಲೋಕಕ್ಕೆ...
ಯಾವ ಬಂಧಗಳಿಲ್ಲದ ನಿರ್ಭೀತ ಸ್ವತಂತ್ರ ಜಗತ್ತಿಗೆ...ಅವನ ಸೇರಲು...