Sunday, March 24, 2013

ಬರೆದಷ್ಟೂ ಇದೆ ನಿನ್ನ ಕಥೆ...

ಕಥೆ-೧
ಆಗಷ್ಟೇ ಎಚ್ಚರವಾಗಿತ್ತು  ಚಿಂಕುವಿಗೆ, ಎಚ್ಚರವಾಗುತ್ತಿದ್ದ ಹಾಗೆ "ಅಮ್ಮಾ" ಎಂದು ಕರೆದಾಗ ಓಡಿ ಬರುತ್ತಿದ್ದ ಅವನ ಮುದ್ದು ಅಮ್ಮ ಅವನ ಮೇಲೆ ಮುತ್ತಿನ ಮಳೆ ಸುರಿಸಿ ಮುದ್ದಾಡಿ ,ಹಾಸಿಗೆ ಇಂದ ಎತ್ತಿಕೊಂಡು ಬಂದು ಸೋಫಾದ ಮೇಲೆ ಮಲಗಿಸುವುದು ನಿತ್ಯದ ವಾಡಿಕೆ..ಚಿಂಕು "ಅಮ್ಮ" ಕರೆದ,ಮುಸುಕು ಹೊದ್ದವನಂತೆ ನಾಟಕ ಮಾಡಿ ಮಲಗಿದ..ಅಮ್ಮ ಯಾಕೋ ಬರಲಿಲ್ಲ ಎಂದು ಮುಸುಕೆಳೆದು ನೋಡಿದ..ಮತ್ತೆ ಬೇಜಾರಾಯಿತು ,ನಿಧಾನಕ್ಕೆ ಎದ್ದ..ಕೈಯಲ್ಲಿ ಅಮ್ಮ ಜಾತ್ರೆಗೆ ತೆಗಿಸಿದ್ದ ಆಟದ ಪಿಸ್ತೂಲು ಹಿಡಿದು ಅಮ್ಮ ಎಲ್ಲಿ ಎಂದು ಹುಡುಕಿದ..ಮನೆ ತುಂಬಾ ಇದ್ದ ಜನಗಳ ಮಧ್ಯೆ ಅಮ್ಮ ಕಾಣಿಸಲಿಲ್ಲ..
ಸೀದಾ ಅಜ್ಜಿ ,ಅಪ್ಪ ಇಬ್ಬರೂ ಕೂತಿದ್ದ ಕೋಣೆಗೆ ಬಂದ,ಅಪ್ಪನ ಕಣ್ಣು ಕೆಂಪಾಗಿತ್ತು..
"ಅಪ್ಪಾ,ನಿನ್ನೆ ನಿದ್ದೆ ಮಾಡಿಸ್ತಾ ಅಮ್ಮ  ಇವತ್ತು ಬೆಳಗ್ಗೆ ಬರ್ತಾರೆ ಅಂದಿದ್ದೆ,ಯಾಕಪ್ಪ ಬರ್ಲಿಲ್ಲ"
ಚಿಂಕು ಕಣ್ಣಲ್ಲಿ ನೀರಿತ್ತು..ಅಪ್ಪ ಕಣ್ಣು ಮತ್ತೆ ಕೆಂಪಾಯ್ತು..ಕಣ್ಣಲ್ಲಿ ನಿನ್ನೆ ಹಾಗೆ ನೀರಿರಲಿಲ್ಲ ಅಷ್ಟೆ..
"ಪುಟ್ಟಾ,ನಿನ್ನ ನೋಡ್ಕೊಳ್ಳೋಕೆ ಹೊಸಾ ಅಮ್ಮ ಬರ್ತಾರೆ"
"ಇಲ್ಲಾ ನಂಗೆ ನನ್ನ ಅಮ್ಮ ಬೇಕು"
"ಏ ಹಾಳು ಶನಿ ಮುಂಡೇದು,ಇದರ ಬಾಯಲ್ಲಿ ಕೆಂಡಾ ಸುರಿಯಾ,ಎರಡು ಏಟು ಬಿಗೀತೀನಿ ನೋಡು,ಒಂದು ಪೈಸಾ ಅಪ್ಪನ ಮನೆ ಇಂದ ತರಲಿಲ್ಲ ನಿನ್ನ ಅಮ್ಮ,ಹೇಳಿದ್ವಿ ಅಂತ ಬೆಂಕಿ ಹಚಿಕೊಂಡು ನೆಗೆದು ಬಿದ್ಲು,ಈಗ ನನ್ನ ಕಡೆ ಸಂಬಂಧ ಆಗೋದ್ರಲ್ಲಿದೆ,ಕೆಟ್ಟ ಮಾತು ಆಡ್ಬೆಡ್ವೋ ಮುಂಡೇದೇ, ಯೆಯ್ ದಿವಾಕರ,ಈ ಮಗಿನ ಎತ್ಕೊಂಡು ಹೊರಗೆ ಹೋಗು"
"ಅಜ್ಜೀ ,ಅಜ್ಜೀ ನೀನು ಒಳ್ಳೆ ಅಜ್ಜಿ ಅಲ್ಲ,ಬರೀ ಕೆಟ್ಟ ಮಾತಾಡ್ತೀಯ,ನೀನೇ ಹಚ್ಚಿದ್ದು ಅಮ್ಮಂಗೆ ಬೆಂಕಿ..ನನ್ನ ಅವತ್ತು ಕೋಣೇಲಿ ಕೂಡಿದ್ದು ನೀನೇ..ಉಂ..ಊಂ..ಅಪ್ಪಾ ಅಪ್ಪ ಬಾ ಅಪ್ಪಾ,ನಾವು ಅಮ್ಮನ ಹತ್ತಿರ ಹೋಗೋಣ, ಅಜ್ಜಿ ಆ ಹೊಸಾ ಅಮ್ಮ ಬೇಕಾದ್ರೆ ಇಲ್ಲೇ ಇರ್ಲಿ"
ಚಿಂಕು ಅಪ್ಪನ ಹತ್ತಿರ ಓಡಿದ..ಅಪ್ಪ ಅಮ್ಮನ ಫೋಟೊ ಮುಂದೆ ಹೊಸ ಅಮ್ಮನ ಕೈ ಹಿಡಿದು ನಿಂತಿದ್ದು ನೋಡುತ್ತಿದ್ದ ಹಾಗೆ
ಚಿಂಕುಗೆ ಅಳು ಬಂತು,ಕೋಪವೂ ಬಂತು..ಕೈಯಲ್ಲಿದ್ದ ಆಟದ ಪಿಸ್ತೂಲನ್ನ ಅಪ್ಪ, ಹೊಸಾ ಅಮ್ಮ ಇಬ್ಬರಿಗು ತೋರಿಸಿ"ಢಂ" ಅನ್ನಿಸಿದ!!

ಕಥೆ-೨
ಅವಳು ಎದ್ದದ್ದು ಈಗಷ್ಟೇ..ಯಾಕೊ ಕೆಲಸಕ್ಕೆ ಹೋಗುವ ಮನಸಿಲ್ಲ ಆಕೆಗೆ..ಮುಖ ತೊಳೆದು ಬಂದು ಕನ್ನಡಿ ನೋಡಿದಳು..
ತನ್ನ ಮುಖವೆ ಅಲ್ಲ ಅನ್ನುವಷ್ಟು ವಿಚಿತ್ರವಾಗಿ ಕಾಣಿಸಿತು ಅವಳಿಗೆ..ಮೊಬೈಲ್ ರಿಂಗಣಿಸಿತು..ನೋಡಿದಳು..ಆ ಕಡೆ ಆಶಾ"ಯಾಕೇ ಇನ್ನು ರೆಡಿ ಆಗಿಲ್ವಾ?ಕ್ಯಾಬ್ ನಮ್ಮನೆ ಇಂದ ಹೊರಟಾಯ್ತು" ಫೋನ್ ಕಟ್..ಬೇಗ ಬೇಗ ಒಂದು ಸೀರೆ ಸುತ್ತಿ ವ್ಯಾನಿಟಿ ಬ್ಯಾಗು ಸಿಕ್ಕಿಸಿ,ಫೋನ್ ಹಿಡಿದು ತಯಾರಾದಳು.."ಸಂಜೆ ಬಂದು ನಾಕು ಚೆಂಬು ಸ್ನಾನ ಮಾಡಿದ್ರಾಯ್ತು" ಅಂದು ಚಪ್ಪಲಿ ಮೆಟ್ಟಿ ಬಾಗಿಲು ಬೀಗ ತೊಡಿಸಿ ರಸ್ತೆಯ ಕೊನೆಗೆ ಬಂದು ನಿಂತಳು..
ಕ್ಯಾಬ್ ಬಂದು ಪಕ್ಕದಲ್ಲಿ ನಿಂತಿತು.."ಅಬ್ಬಾ ಆಗ್ಲೆ ರೆಡಿ ಆಗಿದ್ಯಾ?? ಬಾ ಕುತ್ಕೋ, ನಂದೀಶ ನಡೀರಿ" ಎಂದು ಆಶಾ ಎಂದಿನಂತೆ ವಟ ವಟ ಶುರು ಮಾಡಿದಾಗ ಮನಸಿಗೆ ಎಷ್ಟೋ ಹಾಯೆನ್ನಿಸಿತು..ಅವಳೊಬ್ಬಳೇ ತಾನೇ ತನ್ನ ಯಾವಾಗ್ಲೂ ಕುಶಿಯಾಗಿ ನಗಿಸ್ತಾ ಇರೋಳು..ಮಾತು ಸಲ್ಪ ಜಾಸ್ತಿ ಆದ್ರೆ ಅದರಿಂದ ತನಗೇನು ತೊಂದರೆ ಇಲ್ಲ..ಬದಲಾಗಿ ಎಲ್ಲ ವಿಶಯಗಳೂ ತನಗೆ ತಿಳಿಯುತ್ತವೆ..ಆಕೆ ಇಂದಲೇ ಅಲ್ಲವೇ ಇವತ್ತು ದೀಪಕ್ ಮ್ಯಾನೇಜರ್ ಆಗಿ ತಮ್ಮ ಟೀಮ್ ಜಾಯಿನ್ ಆಗ್ತಾ ಇರೋ ವಿಶಯ ತಿಳಿದದ್ದು..
ಯೋಚನೆಯಲ್ಲಿ ಆಫೀಸ್ ಬಂದದ್ದೇ ತಿಳಿಯಲಿಲ್ಲ,ಹೋಗಿ ಐಡಿ ಕಾರ್ಡ್ ಸ್ವೈಪ್ ಮಾಡಿ ತನ್ನ ಕ್ಯುಬಿಕ್ ಬಳಿ ಬಂದಾಗ ಕಂಪ್ಯೂಟರ್ ಎದುರು ಒಂದು ಹೂವು ಮತ್ತು ಪತ್ರ ಕಾಣಿಸಿತು.."ನಿನಗಾಗಿ ಈ ದಿನ..ನನ್ನ ಕ್ಯಾಬಿನ್ ಅಲ್ಲಿ ಕಾಯ್ತಾ ಇರ್ತೀನಿ,ನಿನ್ನವ ದೀಪಕ್"
ತುಟಿಗಳ ಮೇಲೊಂದು ವಿಷಾದದ ನಗು ಸುಳಿದು ಹೋಯಿತು,"ಕಾಯುವದಾಗಿದ್ದರೆ ಯಾವತ್ತೋ ಕಾಯುತ್ತಿದ್ದೆ" ಮನಸು ಗೊಣಗಿತು..ಆಕೆಯ ಬದುಕಲ್ಲಿ ಬಿರುಗಾಳಿ ಎಬ್ಬಿಸಿದವ..ಕನಸುಗಳನ್ನೆಲ್ಲ ಚೂರು ಮಾಡಿ ತನ್ನ ಸಾಮ್ರಾಜ್ಯ ಕಟ್ಟಿ ಕೊಂಡವ,ಅವಳ ಅನಿವಾರ್ಯತೆಯನ್ನ ದೌರ್ಬಲ್ಯವಾಗಿ ಪರಿವರ್ತಿಸಿ ಆಕೆಯ ಬದುಕನ್ನೆ ನಾಶ ಮಾಡಿದವ,ಅವತ್ತು ಆಶಾ ಇಲ್ಲದೆ ಹೋಗಿರುತ್ತಿದ್ದರೆ ತಾನು ಜೀವಂತ ಉಳಿಯುವ ಪ್ರಶ್ನೆಯೇ ಇರುತ್ತಿರಲಿಲ್ಲ..ಅದು ಗೊತ್ತಿದ್ದೂ ಅದೆಂತಹ ಮನುಷ್ಯ ಈತ!!ಮತ್ತೆ ತನ್ನ ಬದುಕು ಸೂತ್ರ ತಪ್ಪಿದ ಪಟದಂತಾಗುವುದೇ??ಆಕೆಗೆ ಭಯವಾಯಿತು..
ಆದರೆ ಆಕೆ ಅಂದುಕೊಂಡಂತೆ ಏನಾಗಲಿಲ್ಲ..ದಿನಗಳು ಉರಳಿದವು..ತನ್ನ ಕಣ್ಣೆದುರೇ ದಿನ ಕಳೆದಂತೆ ಎಲ್ಲಾ ತಿಳಿದ ಅಶಾ ಅವನ ಕೈಗೊಂಬೆ ಆಗುತ್ತಿದ್ದನ್ನ ನೋಡುತ್ತಾ ಆಶ್ಚರ್ಯ ಚಕಿತಳಾಗುತ್ತಿದ್ದಳು ಅವಳು,ಆಶಾಳೊಡನೆ ಈ ವಿಶಯ ಚರ್ಚಿಸುವ ಆಕೆಯ ಪ್ರಯತ್ನಗಳು ವಿಫಲವಾಯಿತು"ಇದು ನನ್ನ ವೈಯುಕ್ತಿಕ ವಿಶಯ,ವ್ಯಕ್ತಿಗಳು, ಸಂದರ್ಭಗಳು ಬದಲಾಗುತ್ತಲೇ ಇರುತ್ತವೆ.ಅವನು ಆ ದಿನ ಬೇರೆ, ಈ ದಿನ ಬೇರೆ" ಎಂದು ಬಾಯಿ ಮುಚ್ಚಿಸಿದ್ದಳು..ಹೌದೇ? ಆ ಕ್ರೌರ್ಯ,ಹೆಣ್ಣೆಂದರೆ ಕಾಲ ಕಸದ ಮನೋಭಾವ ಅದು ಬದಲಾಗಬಹುದೇ?ಉತ್ತರವಿಲ್ಲ ಅವಳ ಬಳಿ.

ಹೀಗೊಂದು ಅಂತದ್ದೇ ದಿನ..ನಗು ನಗುತಾ ಆಶಾ ದೀಪಕ್ ಕ್ಯಾಬಿನ್ನಿಗೆ ಹೋದದ್ದು ಕಂಡಳು ಅವಳು..ನಂತರ ನಡೆದದ್ದು ದೊಡ್ಡ ಅವಾಂತರ..ಆಶಾ ಅಳುತ್ತಾ  ಬಂದದ್ದು ,ಅವತ್ತೇ ದೊಡ್ಡ ಮೀಟಿಂಗೊಂದು ಜರುಗಿ ದೀಪಕ್  ರಾಜೀನಾಮೆ ಕೊಟ್ಟದ್ದು ನಡೆಯಿತು..ತಾನೊಂದು ಸಾಕ್ಷಿಯಾಗಿ ಇದಕ್ಕೆ ಆಗಬೇಕಾದದ್ದೇನಿದೆ..ಅಂದು ಕೊಂಡಳು ಅವಳು..

ಮರುದಿನ ಕ್ಯಾಬಿನಲ್ಲಿ ಬರುತಾ ಆಶಾ ಹೇಳಿದಳು" ನಿನ್ನ ತರ ಮೊದ್ದು ಆಗಿದ್ರೆ ಏನೂ ನಡೆಯಲ್ಲ..ನಿನ್ನ ಗೋಳಾಡಿಸಿದ ಅವನನ್ನ ನಾ ಹಾದಿಗೆ ತಂದೆ ಅಷ್ಟೆ..ನಿನ್ನ ಬದುಕು ಹಾಳು ಮಾಡಿ ಆತ ಗೆದ್ದೆ ಅಂದುಕೊಂಡ.ಅವನ ಬದುಕು ಹಾಳು ಮಾಡಿ ನಿನ್ನ ನಾ ಗೆಲ್ಲಿಸಿದೆ,ನೀ ನನ್ನ ಬೈದುಕೊಂಡಿದ್ದೀಯಾ ಅಂತ ಗೊತ್ತು..ಆದರೆ ಅವನ ಮಾನ ತೆಗೆಯೊ ತನಕ ನನಗೆ ನಿನ್ನ ಜೊತೆ ಈ ನಾಟಕ ಅವಶ್ಯಕ ಆಗಿತ್ತು..ಹೇಳು ಸಮಾಧಾನವೇ?" ಅವಳ ಮೊಗದ ಮೇಲೊಂದು ನಿರ್ಲಿಪ್ತ ಮುಗುಳ್ನಗು ಹಾದು ಹೋಯಿತು!